ಬಡವರ ಹೆಸರಲ್ಲಿ ನಕಲಿ ಖಾತೆ ತೆರೆದು ಅಕ್ರಮ ವ್ಯವಹಾರ; ಸಿಬಿಐ, ಇ.ಡಿ ತನಿಖೆಗೆ ಸಿ.ಟಿ.ರವಿ ಆಗ್ರಹ

ಬೆಂಗಳೂರು: ಚಿಕ್ಕಮಗಳೂರು, ಶಿವಮೊಗ್ಗ, ಹುಬ್ಬಳ್ಳಿಯಲ್ಲಿ ಬಡಜನರ ಹೆಸರಲ್ಲಿ ನಕಲಿ ಖಾತೆಗಳನ್ನು ತೆರೆದು ಅಕ್ರಮವಾಗಿ ಹಣ ವರ್ಗಾವಣೆ ಮಾಡಿ ವಂಚಿಸಿರುವ ಪ್ರಕರಣವನ್ನು ಸಿಬಿಐ ಹಾಗೂ ಇ.ಡಿ ತನಿಖೆಗೆ ವಹಿಸಲು ಗೌರವಾನ್ವಿತ ರಾಜ್ಯಪಾಲರಿಗೆ ಮನವಿ ಮಾಡಿದ್ದೇವೆ ಎಂದು ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರು ಹೇಳಿದ್ದಾರೆ.

ಮಾನ್ಯ ರಾಜ್ಯಪಾಲರಿಗೆ ಇಂದು ಮನವಿ ಸಲ್ಲಿಸಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬಡಜನರ ಆಧಾರ್ ಕಾರ್ಡ್ ಪಡೆದು ಅವರ ಹೆಸರಲ್ಲಿ ಹೊಸ ಸಿಮ್ ಖರೀದಿಸಿ, ಜನರಿಗೆ ಯಾವುದೇ ದಾಖಲೆ ನೀಡದೆ ಬ್ಯಾಂಕ್ ಅಧಿಕಾರಿಗಳ ಜೊತೆ ಶಾಮೀಲಾಗಿ ಅವರ ಹೆಸರಲ್ಲಿ ಕೋಟ್ಯಂತರ ರೂ. ವ್ಯವಹಾರ ಮಾಡಿದ್ದರ ಬಗ್ಗೆ ದೂರುಗಳು ಹುಬ್ಬಳ್ಳಿ, ಶಿವಮೊಗ್ಗದಲ್ಲಿ ದಾಖಲಾಗಿವೆ. ̇ರೂ. 87 ಕೋಟಿ ವಹಿವಾಟು ನಡೆದಿರುವುದು ದೃಢಪಡಿಸಲಾಗಿದೆ ಎಂದರು.

ಈ ಪ್ರಕರಣದಲ್ಲಿ ಮೂವರ ಬಂಧನವಾಗಿದೆ. ಚಿಕ್ಕಮಗಳೂರಿನಲ್ಲಿ ಪೌರ ಕಾರ್ಮಿಕರು, ಹಮಾಲರು, ಪೇಂಟರ್‍ಗಳು ಹಾಗೂ ಕೂಲಿಯಾಳುಗಳ ಹೆಸರಲ್ಲಿ ಖಾತೆ ತೆರೆದು ಅವರಿಗೆ ತಿಳಿಯದಂತೆ ಲಕ್ಷಾಂತರ ರೂ. ವ್ಯವಹಾರ ಮಾಡಿದ್ದಾರೆ. ಆ ಹಣದ ಮೂಲ ಯಾವುದು ಎಂಬುದು ಪತ್ತೆಯಾಗಬೇಕು. ಇದು ತೆರಿಗೆ ವಂಚನೆ, ಆನ್‍ಲೈನ್ ಬೆಟ್ಟಿಂಗ್ ಹಾಗೂ ಡಿಜಿಟಲ್ ಅರೆಸ್ಟ್ ಮೂಲಕ ಖಾತೆಯಿಂದ ಅಕ್ರಮವಾಗಿ ವರ್ಗಾವಣೆ ಮಾಡಿದ ಹಣ ಎನ್ನಲಾಗಿದೆ ಎಂದು ವಿವರಿಸಿದರು.

ಈ ಅಕ್ರಮದ ಕಿಂಗ್‍ಪಿನ್‍ಗಳು ದುಬೈನಲ್ಲಿ ಕುಳಿತು ಎಲ್ಲವನ್ನೂ ಮಾಡುತ್ತಿದ್ದಾರೆ ಎಂಬ ಮಾಹಿತಿ ಇದೆ. ಇದನ್ನು ಮುಚ್ಚಿ ಹಾಕುವ ಷಡ್ಯಂತ್ರ ಇದೆ. ಈ ವ್ಯವಹಾರ ಅಂತರ ರಾಜ್ಯ, ಅಂತರ ಜಿಲ್ಲೆ ಹಾಗೂ ಅಂತರರಾಷ್ಟ್ರಕ್ಕೆ ಸೇರಿದೆ. ಈ ಪ್ರಕರಣ ಸಂಬಂಧ ತೆಲಂಗಾಣ ಮತ್ತು ಛತ್ತೀಸಗಡದಲ್ಲಿ ಪ್ರಕರಣ ದಾಖಲಾಗಿದೆ. ಬಹರೇನ್‍ನಿಂದ ದೂರು ದಾಖಲಾಗಿದೆ. ಆದ್ದರಿಂದ ಇದನ್ನು ಜಾರಿ ನಿರ್ದೇಶನಾಲಯ (ಇಡಿ) ಹಾಗೂ ಸಿಬಿಐ ಮೂಲಕ ತನಿಖೆ ಮಾಡಬೇಕು. ಇದರ ಹಿಂದಿರುವ ಕಿಂಗ್ ಪಿನ್ ಅವರ ಬಂಧನವಾಗಬೇಕು ಎಂದು ಆಗ್ರಹಿಸಿರುವುದಾಗಿ ತಿಳಿಸಿದರು.

Related posts