ಸಕ್ಕರೆ ಬೆಲೆ ಏರಿಕೆ ನಡುವೆ ಎಥನಾಲ್ ಲಾಭ ರೈತರಿಗೂ ಸಿಗಲಿ: ಕುರುಬುರ್ ಶಾಂತಕುಮಾರ್

ಬೆಂಗಳೂರು: ಮಾರುಕಟ್ಟೆಯಲ್ಲಿ ಸಕ್ಕರೆ ಬೆಲೆ ಏರಿಕೆಯಾಗುತ್ತಿರುವ ಸಂದರ್ಭದಲ್ಲಿ ಸಕ್ಕರೆ ಕಾರ್ಖಾನೆಗಳು ಎಥನಾಲ್ ಉತ್ಪಾದನೆಯಿಂದ ಲಾಭ ಪಡೆಯುತ್ತಿದ್ದು, ಕಬ್ಬು ಬೆಳೆಗಾರರಿಗೆ ಮಾತ್ರ ನ್ಯಾಯಯುತ ಬೆಲೆ ಸಿಗುತ್ತಿಲ್ಲ ಎಂದು ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರ ಸಂಘದ ರಾಜ್ಯಾಧ್ಯಕ್ಷ ಕುರುಬುರ್ ಶಾಂತಕುಮಾರ್ ಆರೋಪಿಸಿದ್ದಾರೆ.

ಮಾಧ್ಯಮ ಪ್ರಕಟಣೆ ಮೂಲಕ ಮಾತನಾಡಿದ ಅವರು, ಮಳೆ ಕೊರತೆ ಹಾಗೂ ಬರಗಾಲದಿಂದ ಕರ್ನಾಟಕ, ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶದಲ್ಲಿ ಕಬ್ಬಿನ ಇಳುವರಿ ಕುಸಿದಿದ್ದು, ಉತ್ಪಾದನಾ ವೆಚ್ಚವೂ ಹೆಚ್ಚಾಗಿದೆ. ಹೀಗಾಗಿ ರೈತರ ಸಂಕಷ್ಟ ನಿವಾರಣೆಗೆ ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

‘ಬ್ರೆಜಿಲ್ ಮಾದರಿಯಲ್ಲಿ ವೈಜ್ಞಾನಿಕ ಕಬ್ಬು ನೀತಿ ರೂಪಿಸಿ’

ದೊಡ್ಡ ಸಕ್ಕರೆ ಕಾರ್ಖಾನೆಗಳಿಗೆ ಮಾತ್ರ ಎಥನಾಲ್ ಉತ್ಪಾದನೆಯ ಲಾಭ ಸೀಮಿತವಾಗಬಾರದು. ರೈತರು ಸ್ಥಳೀಯ ಆಲೆಮನೆಗಳಲ್ಲಿಯೇ ಎಥನಾಲ್ ಉತ್ಪಾದಿಸಲು ಸರಳ ನಿಯಮಗಳನ್ನು ರೂಪಿಸಬೇಕು ಎಂದು ಶಾಂತಕುಮಾರ್ ಆಗ್ರಹಿಸಿದ್ದಾರೆ.

ರೈತರು ಉತ್ಪಾದಿಸುವ ಎಥನಾಲ್ ಅನ್ನು ಅಡುಗೆ ಇಂಧನವಾಗಿ ಹಾಗೂ ತಮ್ಮ ವಾಹನ, ಟ್ರ್ಯಾಕ್ಟರ್‌ಗಳಿಗೆ ಬಳಸಲು ಅವಕಾಶ ನೀಡಬೇಕು. ಹೆಚ್ಚುವರಿ ಎಥನಾಲ್ ಅನ್ನು ಸರ್ಕಾರವೇ ನಿಗದಿತ ದರದಲ್ಲಿ ಖರೀದಿಸುವ ವ್ಯವಸ್ಥೆ ಕಲ್ಪಿಸಬೇಕು ಎಂದು ಹೇಳಿದ್ದಾರೆ.

ಕಬ್ಬಿನ ಉತ್ಪಾದನೆ ಹೆಚ್ಚಿರುವ ವರ್ಷಗಳಲ್ಲಿ ಹೆಚ್ಚುವರಿ ಕಬ್ಬನ್ನು ಸಕ್ಕರೆಯ ಬದಲು ಎಥನಾಲ್ ಉತ್ಪಾದನೆಗೆ ಬಳಸಬೇಕು. ಬರಗಾಲದಲ್ಲಿ ಕಬ್ಬಿನ ಇಳುವರಿ ಕಡಿಮೆಯಾದಾಗ ಎಥನಾಲ್ ಉತ್ಪಾದನೆ ನಿಯಂತ್ರಿಸಿ, ದೇಶೀಯ ಅಗತ್ಯಕ್ಕೆ ಸಕ್ಕರೆ ಉತ್ಪಾದನೆಗೆ ಆದ್ಯತೆ ನೀಡಬೇಕು. ಇದು ಬ್ರೆಜಿಲ್ ಮಾದರಿಯ ವೈಜ್ಞಾನಿಕ ನೀತಿಯಾಗಬೇಕು ಎಂದು ಅವರು ಹೇಳಿದ್ದಾರೆ.

ಬರಗಾಲದಿಂದ ಸಂಕಷ್ಟದಲ್ಲಿರುವ ರೈತರಿಗೆ FRP ದರವನ್ನು ವೈಜ್ಞಾನಿಕವಾಗಿ ಹೆಚ್ಚಿಸಿ, ಉಪ ಉತ್ಪನ್ನಗಳ ಲಾಭದಲ್ಲಿ ಸೂಕ್ತ ಪಾಲು ನೀಡಬೇಕು. ಸ್ಥಳೀಯ ಮಟ್ಟದಲ್ಲಿ ಎಥನಾಲ್ ಉತ್ಪಾದನೆಗೆ ರೈತರಿಗೆ ಹಕ್ಕು ಕಲ್ಪಿಸುವುದು ಸರ್ಕಾರದ ತಕ್ಷಣದ ಆದ್ಯತೆಯಾಗಬೇಕು ಎಂದು ಶಾಂತಕುಮಾರ್ ಒತ್ತಾಯಿಸಿದ್ದಾರೆ.

Related posts