‘ಅಗತ್ಯವಿರುವವರಿಗೆ ಧರ್ಮ ನೋಡದೆ ಸೇವೆ, ಆರ್‌ಎಸ್‌ಎಸ್‌ಗೆ ಪ್ರಚಾರ ಬೇಕಿಲ್ಲ’: ಮೋಹನ್ ಭಾಗವತ್

ನ್ಯೂಯಾರ್ಕ್: ಧಾರ್ಮಿಕ ಹಾಗೂ ಸಾಮಾಜಿಕ ವಿಭಜನೆಗಳನ್ನು ನಿವಾರಿಸಲು ಜ್ಞಾನ ಮಾತ್ರ ಸಾಕಾಗುವುದಿಲ್ಲ. ಸೇವೆ, ಪ್ರೀತಿ ಮತ್ತು ಗೌರವವನ್ನು ದೈನಂದಿನ ಬದುಕಿನ ಭಾಗವಾಗಿಸುವ ನಿರಂತರ ಅಭ್ಯಾಸ ಅಗತ್ಯ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.

ನ್ಯೂಯಾರ್ಕ್‌ನಲ್ಲಿ ನಡೆದ ‘ಒಂದು ಜಗತ್ತು, ಒಂದು ಮಾನವೀಯತೆ’ ಕಾರ್ಯಕ್ರಮದಲ್ಲಿ ಧಾರ್ಮಿಕ ನಾಯಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಜಗತ್ತಿನ ವಿವಿಧ ಧಾರ್ಮಿಕ ಪರಂಪರೆಗಳಲ್ಲಿ ಶಾಂತಿ, ಏಕತೆ ಮತ್ತು ಸಹಬಾಳ್ವೆಗೆ ಅಗತ್ಯವಾದ ಜ್ಞಾನ ಈಗಾಗಲೇ ಇದೆ. ಆದರೆ ಆ ಜ್ಞಾನವು ಮಾನವ ನಡವಳಿಕೆಯಲ್ಲಿ ಪ್ರತಿಫಲಿಸುವಂತೆ ಮಾಡುವುದೇ ಸವಾಲು ಎಂದರು.

ಜ್ಞಾನವಿದ್ದರೂ ವೈಯಕ್ತಿಕ ಆಸೆ ಮತ್ತು ಪ್ರಲೋಭನೆಗಳಿಂದ ಮನುಷ್ಯರು ಅದಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಾರೆ ಎಂದು ತಮ್ಮದೇ ಉದಾಹರಣೆ ನೀಡಿದ ಭಾಗವತ್, ಮಧುಮೇಹವಿದ್ದರೂ ಸಿಹಿ ತಿನ್ನಲು ನೆಪ ಹುಡುಕುವಂತೆಯೇ ಸಾಮಾಜಿಕ ವಿಚಾರಗಳಲ್ಲೂ ಆಗುತ್ತದೆ ಎಂದರು.

“ಬೌದ್ಧಿಕವಾಗಿ ಶಿಕ್ಷಣ ನೀಡುವುದರಿಂದ ಮಾತ್ರ ಬದಲಾವಣೆ ಸಾಧ್ಯವಿಲ್ಲ. ಉತ್ತಮ ಅಭ್ಯಾಸಗಳನ್ನು ಬೆಳೆಸಬೇಕು” ಎಂದು ಅವರು ಪ್ರತಿಪಾದಿಸಿದರು.

ರಾಮಕೃಷ್ಣ ಪರಮಹಂಸರು ವಿವಿಧ ಧರ್ಮಗಳನ್ನು ಅನುಸರಿಸಿ, ಹಲವು ಮಾರ್ಗಗಳು ಒಂದೇ ಗುರಿಯತ್ತ ಕರೆದೊಯ್ಯುತ್ತವೆ ಎಂಬ ಅನುಭವಕ್ಕೆ ಬಂದಿದ್ದರು ಎಂದು ಭಾಗವತ್ ಹೇಳಿದರು. ವಿಭಿನ್ನ ಧರ್ಮಗಳು ಮತ್ತು ನಂಬಿಕೆಗಳ ನಡುವಿನ ಸಾಮ್ಯತೆಯನ್ನು ಅರಿತುಕೊಳ್ಳುವುದು ಸಹಬಾಳ್ವೆಗೆ ಸಹಕಾರಿ ಎಂದರು.

ಸಂವಾದದ ಜತೆಗೆ ಸೇವೆಯೂ ನಡೆಯಬೇಕು ಎಂದು ಭಾಗವತ್ ಹೇಳಿದರು. ಅಗತ್ಯವಿರುವ ವ್ಯಕ್ತಿಯ ಧರ್ಮ ಅಥವಾ ಗುರುತನ್ನು ಪರಿಗಣಿಸದೆ ನೆರವು ನೀಡುವುದು ಆರ್‌ಎಸ್‌ಎಸ್‌ನ ಸೇವಾ ಚಟುವಟಿಕೆಗಳ ಮೂಲ ಉದ್ದೇಶ ಎಂದರು.

ಅರಬ್ ದೇಶಗಳಿಗೆ ಸೇರಿದ ಎರಡು ವಿಮಾನಗಳು ಹರಿಯಾಣದ ಬಳಿ ಅಪಘಾತಕ್ಕೀಡಾದ ಸಂದರ್ಭದಲ್ಲಿ ಆರ್‌ಎಸ್‌ಎಸ್ ಸ್ವಯಂಸೇವಕರು ಸ್ಥಳಕ್ಕೆ ತೆರಳಿ ಸಂತ್ರಸ್ತರಿಗೆ ನೆರವಾದ ಘಟನೆಯನ್ನು ಅವರು ಉಲ್ಲೇಖಿಸಿದರು. ಹೆಚ್ಚಿನ ಪ್ರಯಾಣಿಕರು ಮುಸ್ಲಿಮರಾಗಿದ್ದರೂ, ಸ್ವಯಂಸೇವಕರು ಅವರ ಧರ್ಮವನ್ನು ಪರಿಗಣಿಸದೆ ಚಿಕಿತ್ಸೆ, ಮೃತದೇಹಗಳ ಗುರುತು ಪತ್ತೆ ಹಾಗೂ ಅಂತ್ಯಕ್ರಿಯೆ ಸೇರಿದಂತೆ ಅಗತ್ಯ ನೆರವು ನೀಡಿದರು ಎಂದು ಹೇಳಿದರು.

ಸೇವೆಯ ಹಿಂದೆ ರಾಜಕೀಯ ಉದ್ದೇಶ ಅಥವಾ ಪ್ರತಿಫಲದ ನಿರೀಕ್ಷೆ ಇರಬಾರದು ಎಂದು ಭಾಗವತ್ ಪ್ರತಿಪಾದಿಸಿದರು.

ಆರ್‌ಎಸ್‌ಎಸ್‌ನ ಸೇವಾ ಚಟುವಟಿಕೆಗಳ ಬಗ್ಗೆ ಹೊರಗಿನಿಂದ ರೂಪುಗೊಂಡಿರುವ ಕೆಲವು ತಪ್ಪು ಗ್ರಹಿಕೆಗಳನ್ನು ಒಳಗಿನಿಂದ ಸಂಘಟನೆಯ ಕಾರ್ಯವೈಖರಿಯನ್ನು ಗಮನಿಸಿದರೆ ಅರ್ಥಮಾಡಿಕೊಳ್ಳಬಹುದು ಎಂದ ಅವರು, “ನಾವು ನೀಡುತ್ತೇವೆ; ಪ್ರತಿಯಾಗಿ ಏನನ್ನೂ ಬಯಸುವುದಿಲ್ಲ” ಎಂಬ ನಿಲುವನ್ನು ವ್ಯಕ್ತಪಡಿಸಿದರು.

ಸೇವೆಯನ್ನು ಪಡೆದವರಲ್ಲಿಯೂ ಇದೇ ಮನೋಭಾವ ಬೆಳೆದು, ಬಳಿಕ ಅವರು ಇತರರಿಗೆ ನೆರವಾಗಲು ಮುಂದಾಗುತ್ತಾರೆ. ಹೀಗಾಗಿ ಸೇವೆಯು ಸಮಾಜದಲ್ಲಿ ಮತ್ತಷ್ಟು ಸೇವೆಯ ಮನೋಭಾವವನ್ನು ಹುಟ್ಟುಹಾಕುತ್ತದೆ ಎಂದು ಭಾಗವತ್ ಹೇಳಿದರು.

ಧಾರ್ಮಿಕ ನಾಯಕರು ತಮ್ಮ ಸಮುದಾಯಗಳಲ್ಲಿ ಇಂತಹ ಸೇವೆ, ಸಂವಾದ ಮತ್ತು ಸಹಕಾರದ ಚಟುವಟಿಕೆಗಳನ್ನು ನಿರಂತರವಾಗಿ ಬೆಳೆಸಬೇಕು. ಜ್ಞಾನವನ್ನು ಕೇವಲ ಮಾತಿನಲ್ಲಿ ಉಳಿಸದೆ, ನಡವಳಿಕೆಯಾಗಿ ಪರಿವರ್ತಿಸಿದಾಗ ಮಾತ್ರ ಸಮಾಜದಲ್ಲಿ ಶಾಶ್ವತ ಬದಲಾವಣೆ ಸಾಧ್ಯ ಎಂದು ಅವರು ಹೇಳಿದರು.

Related posts