ಅಯೋಧ್ಯೆ ವಿವಾದ; ಎಲ್ಲಾ ಮೇಲ್ಮನವಿಗಳು ವಜಾ

ನವದೆಹಲಿ: ಅಯೋದ್ಯೆ ರಾಮಜನ್ಮಭೂಮಿ ಸಂಬಂಧ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಎಲ್ಲಾ ಮರುಪರಿಶೀಲನಾ ಮೇಲ್ಮನವಿಗಳನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ.

ರಾಮಜನ್ಮಭೂಮಿ-ಬಾಬ್ರಿ ಮಸೀದಿಯ 2.77 ಎಕರೆ ಭೂವಿವಾದಕ್ಕೆ ಸಂಬಂಧಿಸಿದಂತೆ ನವೆಂಬರ್ 9ರಂದು ಸುಪ್ರೀಂಕೋರ್ಟ್ ಸಿಜೆಐ ಜಸ್ಟೀಸ್ ರಂಜನ್ ಗೋಗೊಯಿ ನೇತೃತ್ವದ ಪಂಚಸದಸ್ಯ ಸಾಂವಿಧಾನಿಕ ಪೀಠ, ಅಯೋಧ್ಯೆ ರಾಮಜನ್ಮಭೂಮಿಯಾಗಿದ್ದು, ಇಲ್ಲಿಯೇ ರಾಮಮಂದಿರ ನಿರ್ಮಿಸಲು ಕೇಂದ್ರ ಸರ್ಕಾರ ಮೂರು ತಿಂಗಳೊಳಗೆ ಸಮಿತಿ ರಚಿಸಬೇಕು. ಅಲ್ಲದೇ ಸುನ್ನಿ ವಕ್ಫ್ ಮಂಡಳಿಗೆ ಮಸೀದಿ ಕಟ್ಟಲು ಅಯೋಧ್ಯೆಯಲ್ಲಿ 5 ಎಕರೆ ಜಾಗ ನೀಡಬೇಕೆಂದು ಒಮ್ಮತದ ತೀರ್ಪನ್ನು ನೀಡಿತ್ತು.

ಆಲ್ ಇಂಡಿಯಾ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ, ಹಿಂದೂ ಮಹಾಸಭಾ, ನಿರ್ಮೋಹಿ ಅಖಾಡ ಸೇರಿದಂತೆ ಹದಿನೆಂಟು ಪಾರ್ಟಿಗಳು ಅಯೋಧ್ಯೆ ತೀರ್ಪಿನ ಕುರಿತು ಮರುಪರಿಶೀಲನಾ ಮೇಲ್ಮನವಿ ಸಲ್ಲಿಸಿದ್ದವು. ಆದರೆ ಅಯೋಧ್ಯೆ ಕುರಿತ ಅಂತಿಮ ತೀರ್ಪಿನ ಮರುಪರಿಶೀಲನಾ ಅರ್ಜಿಯನ್ನು ವಜಾಗೊಳಿಸಿರುವುದಾಗಿ ಪಂಚಸದಸ್ಯ ಪೀಠ ತಿಳಿಸಿದೆ. ಇದರೊಂದಿಗೆ ಅಯೋಧ್ಯೆ ಭೂವಿವಾದ ಕುರಿತ ಕಾನೂನು ಸಮರ ಅಂತ್ಯಕಂಡಂತಾಗಿದೆ.

Related posts