ಖಾಲಿ ಬಿಂದಿಗೆ ಹೊತ್ತು ‘ಕಾವೇರಿ ನೀರು ಉಳಿಸಿ’ ಧರಣಿ; ಫ್ರೀಡಂ ಪಾರ್ಕಲ್ಲಿ 4ನೇ ದಿನವೂ ಜಲ ಸಂರಕ್ಷಣಾ ಸಮಿತಿ ಹೋರಾಟ

ಬೆಂಗಳೂರು; ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ಕರ್ನಾಟಕ ಜಲಸಂರಕ್ಷಣಾ ಸಮಿತಿ ತನ್ನ ಹೋರಾಟವನ್ನು ತೀವ್ರಗೊಳಿಸಿದೆ. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟ ಗುರುವಾರ 4ನೇ ದಿನವೂ ಮುಂದುವರಿಯಿತು. ಖಾಲಿ ಬಿಂದಿಗೆ ಹೊತ್ತು ‘ಕಾವೇರಿ ನೀರು ಉಳಿಸಿ’ ಎಂದು ನಡೆಸಿದ ಧರಣಿ ಗಮನಸೆಳೆಯಿತು.

ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್ ಬೆದರಿಕೆಗೆ ಅಂಜಿ ರಾಜ್ಯ ಸರ್ಕಾರ ತಮಿಳುನಾಡಿಗೆ ಹರಿಸುವ ನೀರು ನಿಲ್ಲಿಸದಿದ್ದರೆ ರಾಜ್ಯದ ಉದ್ದಗಲಕ್ಕೂ ಮಂತ್ರಿಗಳಿಗೆ ಘೇರಾವ್ ಮಾಡುವ ಚಳುವಳಿ, ಕರೆ ನೀಡಬೇಕಾಗುತ್ತದೆ ಎಂದು ಎಚ್ಚರಿಸಿದ ಹೋರಾಟಗಾರರು ಈ ವಿಚಾರದಲ್ಲಿ ಸರ್ಕಾರ ರಾಜ್ಯದ ಹಿತವನ್ನು ನಿರ್ಲಕ್ಷಿಸಿದರೆ ದಸರಾ ಆಚರಣೆಗೆ ಅಡ್ಡಿ ಪಡಿಸುವುದಾಗಿ ಎಚ್ಚರಿಕೆ ಮಾಡಬೇಕಾಗುತ್ತದೆ ಎಂಬ ಸಂದೇಶವನ್ನು ರವಾನಿಸಿದರು.

ಧರಣಿ ಸತ್ಯಾಗ್ರಹ ಸಂದರ್ಭದಲ್ಲಿ ಮಾತನಾಡಿದ ಕುರುಬೂರು ಶಾಂತಕುಮಾರ್, ರಾಜ್ಯದ ಮುಖ್ಯಮಂತ್ರಿ, ನೀರಾವರಿ ಮಂತ್ರಿಗೆ ಇಂಡಿಯಾ ಒಕ್ಕೂಟ ಬೇಕೂ ಅಥವಾ ರಾಜ್ಯದ ಜನ ಬೇಕು ನಿರ್ಧರಿಸಿ, ಪದೇ ಪದೇ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಮಾತಿನ ಒತ್ತಡಕ್ಕೆ ಅಂಜಬೇಡಿ ಎಂದರು.

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಅವೈಜ್ಞಾನಿಕ ಆದೇಶದಿಂದ ರಾಜ್ಯದ ಜನರಿಗೆ ಆಗುತ್ತಿರುವ ಸಂಕಷ್ಟದ ಬಗ್ಗೆ ವಿವರಿಸಲು ಕೇಂದ್ರ ಸರ್ಕಾರದ ಗಮನ ಸಳೆಯಲು ಸದ್ಯದಲ್ಲಿಯೇ ಸಮಿತಿಯ ಮುಖಂಡರ ನಿಯೋಗ ದೆಹಲಿಗೆ ತೆರಳಲಾಗುವುದು ಕಾವೇರಿ ಅಚ್ಚು ಕಟ್ಟು ಭಾಗದ ಎಲ್ಲಾ ಲೋಕಸಭಾ ಸದಸ್ಯರಿಗೆ ಪತ್ರ ಬರೆಯಲಾಗಿದೆ ನಿಯೋಗದ ಜೊತೆ ಜಲಶಕ್ತಿ ಸಚಿವರ ಭೇಟಿಗೆ ಅವಕಾಶ ಕೋರಬೇಕೆಂದು ಲೋಕಸಭಾ ಸದಸ್ಯರಿಗೆ ವಿನಂತಿಸಲಾಗಿದೆ ಎಂದವರು ತಿಳಿಸಿದರು.

ಧರಣಿಯಲ್ಲಿ ಕನ್ನಡ ಚಳುವಳಿಯ ಗುರುದೇವ ನಾರಾಯಣ್, ಮುಖಂಡ ನಾಡ ಸೇನಾನಿ ಕೆಂಪೇಗೌಡ ಪ್ರತಿಷ್ಠಾನ ಅಧ್ಯಕ್ಷ ಮೋಹನ್
ದಲಿತ ಸಂಘಟನೆಗಳ ಒಕ್ಕೂಟದ ವೆಂಕಟಸ್ವಾಮಿ ಅಮ್ಮಾ ಆದ್ಮಿ ಪಕ್ಷದ ವಿಶ್ವನಾಥ್ ಟಿ ,ಸಾಹಿತಿ ಶ್ರೀನಿವಾಸ್, ಸೂರ್ಯನಾರಾಯಣ್ ರೈತ ಮುಖಂಡ ಗಜೇಂದ್ರ ,ಕಮಲಮ್ಮ ಸಹಿತ ಅನೇಕ ಪ್ರಮುಖರು ಭಾಗವಹಿಸಿದ್ದರು.

Related posts