ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ 2026ಕ್ಕೆ ದಿನಗಣನೆ ಆರಂಭವಾಗಿದ್ದು, ಈ ಬಾರಿ ಜಂಬೂಸವಾರಿ ಮತ್ತಷ್ಟು ಅದ್ಧೂರಿಯಾಗುವ ಸಾಧ್ಯತೆ ಇದೆ. ಸ್ಯಾಂಡಲ್ವುಡ್ನ ಸುಮಾರು 30 ಪ್ರಮುಖ ನಟ-ನಟಿಯರು ಜಂಬೂಸವಾರಿಯಲ್ಲಿ ಭಾಗವಹಿಸಲಿದ್ದು, ದಸರಾ ಸಂಭ್ರಮಕ್ಕೆ ಸಿನಿತಾರೆಯರ ಮೆರುಗು ಸಿಗಲಿದೆ.
ಅಂಬಾವಿಲಾಸ ಅರಮನೆಯಿಂದ ಕೆ.ಆರ್. ವೃತ್ತದವರೆಗೆ ನಡೆಯುವ ಜಂಬೂಸವಾರಿ ಮೆರವಣಿಗೆಯಲ್ಲಿ ನಟ-ನಟಿಯರು ತೆರೆದ ವಾಹನದಲ್ಲಿ ಸಾಗಲಿದ್ದಾರೆ. ಈ ಮೂಲಕ ದಸರಾ ಮೆರವಣಿಗೆಯಲ್ಲಿ ಭಾಗವಹಿಸಿ ಜನರನ್ನು ರಂಜಿಸಲಿದ್ದಾರೆ.
ಸಿನಿ ದಿಗ್ಗಜರಿಗೆ ಆಹ್ವಾನ
ಸ್ಯಾಂಡಲ್ವುಡ್ನ ಪ್ರಮುಖ ನಟರಾದ ರಾಕಿಂಗ್ ಸ್ಟಾರ್ ಯಶ್, ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್, ಕಾಂತಾರ ಖ್ಯಾತಿಯ ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ, ಕಿಚ್ಚ ಸುದೀಪ್ ಹಾಗೂ ಕ್ರೇಜಿಸ್ಟಾರ್ ರವಿಚಂದ್ರನ್ ಅವರಿಗೆ ದಸರಾ ಸಮಿತಿ ವಿಶೇಷ ಆಹ್ವಾನ ನೀಡಲು ಮುಂದಾಗಿದೆ.ಆದರೆ ಆಹ್ವಾನಿತರ ಪೈಕಿ ಯಾರೆಲ್ಲ ಜಂಬೂಸವಾರಿಗೆ ಆಗಮಿಸಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.

ಇನ್ನು ಹಿರಿಯ ನಟಿ ಉಮಾಶ್ರೀ ಸೇರಿದಂತೆ ರಚಿತಾ ರಾಮ್, ರುಕ್ಮಿಣಿ ವಸಂತ್ ಹಾಗೂ ಸಪ್ತಮಿ ಗೌಡ ಅವರಿಗೂ ಆಹ್ವಾನ ನೀಡುವ ಸಾಧ್ಯತೆ ಇದೆ. ಸ್ಯಾಂಡಲ್ವುಡ್ ತಾರೆಯರನ್ನು ದಸರಾ ಮೆರವಣಿಗೆಯಲ್ಲಿ ಪಾಲ್ಗೊಳ್ಳುವಂತೆ ಆಹ್ವಾನಿಸಲು ಸರ್ಕಾರದ ಕಡೆಯಿಂದ ಸೂಚನೆ ಬಂದಿದೆ ಎನ್ನಲಾಗಿದೆ.
93 ವರ್ಷಗಳ ಕನ್ನಡ ಚಿತ್ರರಂಗದ ಪಯಣ
ಈ ಬಾರಿಯ ದಸರಾ ಮೆರವಣಿಗೆಯ ಮತ್ತೊಂದು ಪ್ರಮುಖ ಆಕರ್ಷಣೆ ಕನ್ನಡ ಚಿತ್ರರಂಗದ 93 ವರ್ಷಗಳ ಇತಿಹಾಸ ಸಾರುವ ವಿಶೇಷ ಸ್ತಬ್ಧಚಿತ್ರ.
1934ರ ಕಪ್ಪು-ಬಿಳುಪು ಸಿನಿಮಾಗಳ ಕಾಲದಿಂದ ಹಿಡಿದು ಇಂದಿನ ಮಲ್ಟಿಪ್ಲೆಕ್ಸ್ ಹಾಗೂ ಪ್ಯಾನ್ ಇಂಡಿಯಾ ಯುಗದವರೆಗೆ ಕನ್ನಡ ಚಿತ್ರರಂಗ ಬೆಳೆದು ಬಂದ ಹಾದಿಯನ್ನು ಸ್ತಬ್ಧಚಿತ್ರದಲ್ಲಿ ಪ್ರದರ್ಶಿಸಲು ಸಿದ್ಧತೆ ನಡೆಯುತ್ತಿದೆ.
ದಿಗ್ಗಜರಿಗೆ ವಿಶೇಷ ನಮನ
ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ ವರನಟ ಡಾ. ರಾಜ್ಕುಮಾರ್, ಸಾಹಸಸಿಂಹ ಡಾ. ವಿಷ್ಣುವರ್ಧನ್, ರೆಬೆಲ್ ಸ್ಟಾರ್ ಅಂಬರೀಶ್ ಹಾಗೂ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ಸ್ಮರಣಾರ್ಥ ವಿಶೇಷ ಶ್ರದ್ಧಾಂಜಲಿ ಸ್ತಬ್ಧಚಿತ್ರವೂ ಜಂಬೂಸವಾರಿಯಲ್ಲಿ ಗಮನ ಸೆಳೆಯಲಿದೆ.
ಸಿನಿತಾರೆಯರ ಭಾಗವಹಿಸುವಿಕೆ ಹಾಗೂ ಕನ್ನಡ ಚಿತ್ರರಂಗದ ವೈಭವ ಸಾರುವ ಸ್ತಬ್ಧಚಿತ್ರದಿಂದ ಈ ಬಾರಿಯ ಮೈಸೂರು ದಸರಾ ಜಂಬೂಸವಾರಿ ಮತ್ತಷ್ಟು ರಂಗೇರಲಿದೆ.

