ಬಿಜೆಪಿಯ ‘ಜನಸೇವಕ ಸಮಾವೇಶ’ದ ಸಮಾರೋಪಕ್ಕೆ ಅಮಿತ್ ಶಾ

ಬೆಂಗಳೂರು: ಜಿಲ್ಲಾ ಪಂಚಾಯತ್ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ 30 ಜಿಲ್ಲೆಗಳಲ್ಲಿ ಬಿಜೆಪಿಯಿಂದ ಜನವರಿ 11ರಿಂದ 13ರವರೆಗೆ ಜನಸೇವಕ ಸಮಾವೇಶ ನಡೆಯಲಿದೆ. ಬೆಂಗಳೂರಿನಲ್ಲಿ ಸಮಾರೋಪ ಸಮಾರಂಭ ಜನವರಿ 16 ಅಥವಾ 17ರಂದು ನಡೆಯಲಿದ್ದು ಈ ಸಮಾವೇಶದ್ಲಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾಗವಹಿಸುವ ನಿರೀಕ್ಷೆ ಇದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ ಮತ್ತು ವಕ್ತಾರ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ತಿಳಿಸಿದ್ದಾರೆ.

ಶಿವಮೊಗ್ಗದಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿಯ ವಿಶೇಷ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿದ ಅವರು, ಜನವರಿ 11ರಂದು ಮೈಸೂರು, ಚಾಮರಾಜನಗರ, 12ರಂದು ಹಾಸನ ಮತ್ತು ಮಂಡ್ಯ, 13ರಂದು ರಾಮನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಸಮಾವೇಶ ನಡೆಸಲಿದೆ ಎಂದು ವಿವರಿಸಿದರು.

11ರಂದು ಚಿಕ್ಕಮಗಳೂರು ಮತ್ತು ಉಡುಪಿ, 12ರಂದು ಮಡಿಕೇರಿ ಮತ್ತು ಮಂಗಳೂರು, 13ರಂದು ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಎರಡನೆಯ ತಂಡ ಪ್ರವಾಸ ಮಾಡಲಿದೆ. ಮೂರನೇ ತಂಡವು 11ರಂದು ಬೆಳಗಾವಿ, ಚಿಕ್ಕೋಡಿ, 12ರಂದು ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆ, 13ರಂದು ಗದಗ್ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿದೆ. ನಾಲ್ಕನೇ ತಂಡ 11ರಂದು ಬೀದರ್ ಮತ್ತು ಕಲಬುರ್ಗಿ, 12ರಂದು ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ, 13ರಂದು ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಈ ತಂಡ ಪ್ರವಾಸ ಮಾಡಲಿದೆ ಎಂದು ಅವರು ಮಾಹಿತಿ ಹಂಚಿಕೊಂಡರು. ಮತ್ತೊಂದು ತಂಡವು 11ರಂದು ಹಾವೇರಿ ಮತ್ತು ದಾವಣಗೆರೆ ಜಿಲ್ಲೆ, 12ರಂದು ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆ, 13ರಂದು ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಸಮಾವೇಶ ಏರ್ಪಡಿಸಲಿದೆ ಎಂದರು.

ಒಂದು ದೇಶ ಒಂದು ತೆರಿಗೆ, ಒಂದು ದೇಶ ಒಂದು ಪಡಿತರ ಚೀಟಿ ಅನುಷ್ಠಾನ ಆಗಿದೆ. ಒಂದು ದೇಶ ಒಂದೇ ಚುನಾವಣೆ ಕುರಿತ ಚರ್ಚೆ ವ್ಯಾಪಕವಾಗಿ ಆಗಬೇಕು. ಇದರಿಂದ ಸಂಪನ್ಮೂಲದ ಸದ್ಬಳಕೆ ಮತ್ತು ಅಭಿವೃದ್ಧಿ ಕಾರ್ಯ ಇನ್ನಷ್ಟು ವೇಗದಿಂದ ನಡೆಯಲು ಸಾಧ್ಯವಿದೆ. ಇದರ ಸಾಧಕ ಬಾಧಕಗಳ ಕುರಿತು ಚರ್ಚೆ ಅಗತ್ಯವಿದೆ ಎಂದು ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶಿವಮೊಗ್ಗ ಜಿಲ್ಲಾ ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ವಿಭಾಗ ಪ್ರಭಾರಿಗ ಗಿರೀಶ್ ಪಾಟೀಲ್, ರಾಜ್ಯ ಮಾಧ್ಯಮ ವಿಭಾಗದ ಸಂಚಾಲಕ ಕರುಣಾಕರ ಖಾಸಲೆ, ಸದಸ್ಯ ಅವಿನಾಶ್, ಜಿಲ್ಲಾ ಮಾಧ್ಯಮ ಪ್ರಮುಖ್ ಅಣ್ಣಪ್ಪ ಉಪಸ್ಥಿತರಿದ್ದರು.

Related posts