ಶ್ರೀಲಂಕಾ ಬಿಕ್ಕಟ್ಟಿನಲ್ಲಿ ಭಾರತ ಸದಾ ಜತೆಗಿರಲಿದೆ: ರಾಜನಾಥ್ ಸಿಂಗ್

ಕೊಲಂಬೊ: ಶ್ರೀಲಂಕಾ ಯಾವುದೇ ಬಿಕ್ಕಟ್ಟನ್ನು ಎದುರಿಸಿದಾಗಲೂ ಭಾರತವು ಅದರೊಂದಿಗೆ ದೃಢವಾಗಿ ನಿಲ್ಲಲಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ಶ್ರೀಲಂಕಾದ ತಮ್ಮ ಮೊದಲ ಭೇಟಿಯ ವೇಳೆ ಕೊಲಂಬೊದಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತ ಮತ್ತು ಶ್ರೀಲಂಕಾ ನಡುವಿನ ಆಳವಾದ ಸಾಂಸ್ಕೃತಿಕ ಹಾಗೂ ನಾಗರಿಕ ಸಂಬಂಧಗಳನ್ನು ಪ್ರಸ್ತಾಪಿಸಿದರು. ಈ ಬಾಂಧವ್ಯಗಳು ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲು ಗಟ್ಟಿಯಾದ ಅಡಿಪಾಯವಾಗಿವೆ ಎಂದರು.

ಕಳೆದ ಒಂದು ದಶಕದಲ್ಲಿ ಭಾರತದ ಆರ್ಥಿಕತೆಯಲ್ಲಿ ಮಹತ್ವದ ಪರಿವರ್ತನೆಯಾಗಿದೆ. 2014ರಲ್ಲಿ ಸುಮಾರು 2 ಟ್ರಿಲಿಯನ್ ಡಾಲರ್ ಇದ್ದ ಆರ್ಥಿಕತೆ ಇದೀಗ ಸುಮಾರು 4 ಟ್ರಿಲಿಯನ್ ಡಾಲರ್‌ಗೆ ಏರಿದೆ ಎಂದು ಸಿಂಗ್ ಹೇಳಿದರು.

ಜಾಗತಿಕ ಆರ್ಥಿಕ ಸವಾಲುಗಳ ನಡುವೆಯೂ 2026–27ರ ಮೊದಲ ತ್ರೈಮಾಸಿಕದಲ್ಲಿ ಭಾರತದ ಆರ್ಥಿಕತೆ ಶೇ.7.8ರಷ್ಟು ಬೆಳವಣಿಗೆ ದಾಖಲಿಸಿದೆ. ಸರಕು ಮತ್ತು ಸೇವೆಗಳ ರಫ್ತು ಕೂಡ 2014ರ ಸುಮಾರು ₹45 ಲಕ್ಷ ಕೋಟಿಯಿಂದ 2025–26ರಲ್ಲಿ ₹79 ಲಕ್ಷ ಕೋಟಿಗೆ ಏರಿದೆ ಎಂದರು.

ಎಲೆಕ್ಟ್ರಾನಿಕ್ಸ್ ಮತ್ತು ಮೊಬೈಲ್ ಉತ್ಪಾದನೆಯಲ್ಲಿ ಭಾರತ ಗಮನಾರ್ಹ ಪ್ರಗತಿ ಸಾಧಿಸಿದ್ದು, 2014ರಲ್ಲಿ ಎರಡು ಉತ್ಪಾದನಾ ಘಟಕಗಳಿದ್ದ ದೇಶದಲ್ಲಿ ಇದೀಗ 300ಕ್ಕೂ ಹೆಚ್ಚು ಘಟಕಗಳಿವೆ. ಭಾರತ ವಿಶ್ವದ ಎರಡನೇ ಅತಿದೊಡ್ಡ ಮೊಬೈಲ್ ಫೋನ್ ತಯಾರಕ ರಾಷ್ಟ್ರವಾಗಿದೆ ಎಂದು ಹೇಳಿದರು.

ಭಾರತದ ರಕ್ಷಣಾ ರಫ್ತು ಸುಮಾರು ₹600 ಕೋಟಿಯಿಂದ ₹39,000 ಕೋಟಿಗೆ ಏರಿದೆ. ರಕ್ಷಣಾ ಬಜೆಟ್ ಕೂಡ 2013–14ರ ಸುಮಾರು ₹2 ಲಕ್ಷ ಕೋಟಿಯಿಂದ 2025–26ರಲ್ಲಿ ₹7.25 ಲಕ್ಷ ಕೋಟಿಗೆ ಹೆಚ್ಚಾಗಿದೆ ಎಂದು ಸಿಂಗ್ ತಿಳಿಸಿದರು.

ಸ್ಟಾರ್ಟ್‌ಅಪ್‌ಗಳ ಬೆಳವಣಿಗೆ, ಜಿಎಸ್‌ಟಿ ಸುಧಾರಣೆ, ಮೂಲಸೌಕರ್ಯ ವಿಸ್ತರಣೆ ಹಾಗೂ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಭಾರತದ ಪ್ರಗತಿಗೆ ವೇಗ ನೀಡಿವೆ ಎಂದರು.

ಸುಮಾರು 25 ಕೋಟಿ ಜನರು ಬಡತನದಿಂದ ಹೊರಬಂದಿದ್ದು, ಸಾಮಾಜಿಕ ಭದ್ರತಾ ವ್ಯಾಪ್ತಿ 25 ಕೋಟಿಯಿಂದ 95 ಕೋಟಿಗೆ ವಿಸ್ತರಿಸಿದೆ. ನೇರ ಲಾಭ ವರ್ಗಾವಣೆ ಮೂಲಕ ಸುಮಾರು ₹51 ಲಕ್ಷ ಕೋಟಿ ಫಲಾನುಭವಿಗಳ ಖಾತೆಗಳಿಗೆ ನೇರವಾಗಿ ತಲುಪಿದೆ ಎಂದು ಹೇಳಿದರು.

ಭಾರತ–ಶ್ರೀಲಂಕಾ ಸಂಬಂಧದಲ್ಲಿ ಭಾರತೀಯ ವಲಸಿಗರು ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಸಿಂಗ್ ಶ್ಲಾಘಿಸಿದರು.

Related posts