ಕಾವೇರಿ ಸಂಕಷ್ಟ: ಜಲ ಸಂರಕ್ಷಣ ಸಮಿತಿಯಿಂದ ರಾಷ್ಟ್ರಪತಿಗೆ ಮೊರೆ

ಬೆಂಗಳೂರು: ಕಾವೇರಿಗಾಗಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಶುಕ್ರವಾರ ೫ನೇ ದಿನವೂ ಧರಣಿ ಮುಂದುವರಿಸಿದ ಕರ್ನಾಟಕ ಜಲ ಸಂರಕ್ಷಣ ಸಮಿತಿ ಕಾರ್ಯಕರ್ತರು, ಈ ವಿವಾದ ಬಗೆಹರಿಸುವ ಸಂಬಂಧ ರಾಷ್ಟ್ರಪತಿ ಭೇಟಿಗೆ ಜಲ ಸಂರಕ್ಷಣ ಸಮಿತಿ ತಯಾರಿ ನಡೆಸಿದೆ.

ವಿವಿಧ ಸಂಘಟನೆಗಳ ಸಹಭಾಗಿತ್ವದಲ್ಲಿ ಈ ಧರಣಿ ಸತ್ಯಾಗ್ರಹ ನಡೆಯುತ್ತಿದ್ದು, ಹೋರಾಟದ ನೇತೃತ್ವ ವಹಿಸಿರುವ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್, ರಾಜ್ಯ ಸರ್ಕಾರದ ನಡೆ ಬಗ್ಗೆ ಆಕ್ರೋಶ ಹೊರಹಾಕಿದರು. ಧರಣಿ ಸಂದರ್ಭದಲ್ಲಿ ಮಾತನಾಡಿದ ಅವರು, ರಾಜ್ಯದ ರೈತರಿಗೆ ಗಿಳಿಪಾಠ ಹೇಳುವ ಡಿ.ಕೆ..ಶಿವಕುಮಾರ್, ತಮಿಳುನಾಡು ರಾಜ್ಯದಲ್ಲಿ ಮೂರು ಬೆಳೆ ಬೆಳೆಯುವುದಕ್ಕೆ ಕಡಿವಾಣ ಹಾಕುವ ಕೆಲಸಕ್ಕೆ ಮುಂದಾಗಲಿ ನೋಡೋಣ ಎಂದು ಸವಾಲು ಹಾಕಿದರು. ನೀರಾವರಿ ಮಂತ್ರಿಯಾಗಿ ಅವರು ‘ಇಂಡಿಯಾ’ ಒಕ್ಕೂಟ ಬಲಪಡಿಸುವ ಚಿಂತೆಯಲ್ಲಿದ್ದಾರೆ, ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಓಲೈಸುವ ಕಾರಣದಿಂದಲೇ ರಾಜ್ಯದ ನೀರು ಬಿಟ್ಟು ರೈತರನ್ನ ಬಲಿಕೊಟ್ಟಿದ್ದಾರೆ. ಅವರ ಸ್ನೇಹ ಬೇಕು ಅದಕ್ಕಾಗಿ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದು ಸಚಿವ ಡಿಕೆಶಿ ವಿರುದ್ಧ ವಾಗ್ದಾಳಿ ನಡೆಸಿದರು.

ರಾಷ್ಟ್ರಪತಿಗಳನ್ನು ,ಕೇಂದ್ರ ಜಲ ಸಂಪನ್ಮೂಲ ಸಚಿವರನ್ನು ಹಾಗೂ ಕಾವೇರಿ ಪ್ರಾಧಿಕಾರದ ಮುಖ್ಯಸ್ಥರನ್ನು, ಕರ್ನಾಟಕ ಜಲ ಸಂರಕ್ಷಣ ಸಮಿತಿ ನಿಯೋಗ 9ನೇ ತಾರೀಕು ಭೇಟಿ ಮಾಡಲು ದೆಹಲಿಗೆ ತೆರಳುತ್ತಿದೆ ಎಂದು ಮಾಹಿತಿ ನೀಡಿದ ಕುರುಬೂರು ಶಾಂತಕುಮಾರ್, ಈ ನಾಯಕರ ಭೇಟಿಗಾಗಿ ಸಮಯ ನಿಗದಿಗೊಳಿಸುವಂತೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.

ಸಮತಾ ಸೈನಿಕ ದಳದ ರಾಜ್ಯಾಧ್ಯಕ್ಷ ವಿ.ವೆಂಕಟಸ್ವಾಮಿ, ದಲಿತ ಸಂಘಟನೆಗಳ ಮುಖಂಡರಾದ ವೆಂಕಟೇಶ, ಸತೀಸ್, ಕನ್ನಡ ಚಳುವಳಿ ಗುರುದೇವ ನಾರಾಯಣ್, ಅಮ್ ಆದ್ಮಿಪಕ್ಷದ ಉಷಾ ಮೋಹನ್ ಮೊದಲಾದವರು ಧರಣಿಯಲ್ಲಿ ಭಾಗವಹಿಸಿದ್ದರು

Related posts