ಕೊರೋನಾ ಕುರಿತು ಸುದ್ದಿ ಮಾಡುತ್ತಿರುವ ಸುದ್ದಿಗಾರರೇ ಇದೀಗ ಸುದ್ದಿಯಾಗುತ್ತಿದ್ದಾರೆ. ಮುಂಬಯಿಯಲ್ಲಿ 53 ಮಂದಿ ಪತ್ರಕರ್ತರು ಸೋಂಕಿಗೊಳಗಾಗಿದ್ದಾರೆಂಬ ಸುದ್ದಿಯ ಬೆನ್ನಲ್ಲೇ ಸುದ್ದಿವಾಹಿನಿಯ ಸಿಬ್ಬಂದಿ ಸಮೂಹಕ್ಕೂ ಸೋಂಕು ಹರಡಿರುವ ಸುದ್ದಿ ಆತಂಕಕಾರಿ ಬೆಳವಣಿಗೆಯೆನಿಸಿದೆ.
ಕೊರೋನಾ ಕಾರಣಕ್ಕಾಗಿ ಲಾಕ್’ಡೌನ್ ಜಾರಿಯಲ್ಲಿದ್ದರೂ ಸೋಂಕು ಹರಡುತ್ತಿರುವ ಪ್ರಮಾಣ ಹೆಚ್ಚುತ್ತಲೇ ಇವೆ. ಅದರಲ್ಲೂ ಸೋಂಕಿತರ ಬಗ್ಗೆ ಕಾಳಜಿ ವಹಿಸುತ್ತಿರುವ ಆರೋಗ್ಯ ಸಿಬ್ಬಂದಿಯೇ ಸೋಂಕಿಗೊಳಗಾಗುತ್ತಿರುವ ಸುದ್ದಿ ತಲ್ಲಣ ಸೃಷ್ಟಿಸಿದೆ..
ಮಹಾರಾಷ್ತ್ರದಲ್ಲಿ ಸೇವಾ ನಿರತ ಪತ್ರಕರ್ತರಿಗೂ ಕೊರೋನಾ ಸೋಂಕು ಅಂಟಿಕೊಂಡಿರುವ ಸಂಗತಿ ದೇಶವ್ಯಾಪಿ ಕಳವಳ ಉಂಟುಮಾಡಿದೆ. ಸುಮಾರು 53 ಪತ್ರಕರ್ತರು ಕೋವಿಡ್-19 ಸೋಂಕಿಗೊಳಗಾಗಿ ಮುಂಬೈಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಸುದ್ದಿಯ ಬೆನ್ನಲೇ ದಕ್ಷಿಣ ಭಾರತದ ಪ್ರಸಿದ್ಧ ಸುದ್ದಿ ವಾಹಿನಿಯೊಂದರ ಸಿಬ್ಬಂದಿ ಸಮೂಹವೂ ಸೋಂಕಿಗೊಳಗಾಗಿದ್ದಾರೆಂಬ ಸುದ್ದಿ ಬೆಚ್ಚಿ ಬೀಳಿಸಿದೆ. ತಮಿಳು ಸುದ್ದಿ ವಾಹಿನಿಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ 25 ಮಂದಿ ಸಿಬಂದಿಗೆ ಕೋವಿಡ್-19 ವೈರಸ್ ಸೋಂಕು ಅಂಟಿಕೊಂಡಿರುವುದು ದೃಢಪಟ್ಟಿದೆ ಎಂದು ಹೇಳಲಾಗುತ್ತಿದೆ.
ಸುದ್ದಿವಾಹಿನಿಯ 90ಕ್ಕೂ ಹೆಚ್ಚು ಮಂದಿಯ ರಕ್ತ ಹಾಗೂ ಗಂಟಲು ದ್ರಾವಣದ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಿದಾಗ ಹಲವರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಕನಿಷ್ಠ 25 ಮಂದಿಯ ವರದಿಯ ಪಾಸಿಟಿವ್ ಬಂದಿದೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಈ ರೀತಿಯಲ್ಲಿ ಪತ್ರಕರ್ತರಿಗೂ ಸೋಂಕು ಅಂಟಿಕೊಂಡಿರುವ ಆಘಾತಕಾರಿ ಬೆಳವಣಿಗೆ ನಂತರ ಬಹುತೇಕ ರಾಜ್ಯಗಳಲ್ಲಿ ಸರ್ಕಾರವೇ ಸೋಂಕು ಪರೀಕ್ಷೆಗೆ ವ್ಯವಸ್ಥೆ ಕಲ್ಪಿಸಿದೆ. ಕರ್ನಾಟಕ ಸರ್ಕಾರ ಹಾಗೂ ದೆಹಲಿ ಸರ್ಕಾರ ಈ ವಿಚಾರದಲ್ಲಿ ಕ್ಷಿಪ್ರ ಕ್ರಮ ಕೈಗೊಂಡಿದೆ.
ಇದನ್ನೂ ಓದಿ.. ಮೇ 3ರ ನಂತರವೂ ಲಾಕ್’ಡೌನ್ ಮುಂದುವರಿಕೆ; ಮೋದಿ ನಿರ್ಧಾರದ ಬಗ್ಗೆ ಕುತೂಹಲ