ಬೈರತಿ ಸುರೇಶ್‌ ವಿರುದ್ಧದ ₹50 ಕೋಟಿ ಮಾನನಷ್ಟ ಕೇಸ್ ರದ್ದುಪಡಿಸಲು ಹೈಕೋರ್ಟ್ ನಕಾರ

ಬೆಂಗಳೂರು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಚಿವ ಬೈರತಿ ಸುರೇಶ್ ಮತ್ತು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ನಡುವಿನ ಕಾನೂನು ಸಮರಕ್ಕೆ ಕರ್ನಾಟಕ ಹೈಕೋರ್ಟ್ ಮಹತ್ವದ ತಿರುವು ನೀಡಿದೆ.

ಎಚ್. ವಿಶ್ವನಾಥ್ ವಿರುದ್ಧ ಬೈರತಿ ಸುರೇಶ್ ಬೆಂಗಳೂರಿನ ಸಿವಿಲ್ ಕೋರ್ಟ್‌ನಲ್ಲಿ ದಾಖಲಿಸಿರುವ ₹50 ಕೋಟಿ ಮೊತ್ತದ ಸಿವಿಲ್ ಮಾನನಷ್ಟ ಮೊಕದ್ದಮೆಯನ್ನು ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ.

ತಮ್ಮ ವಿರುದ್ಧ ಸಚಿವರು ದಾಖಲಿಸಿರುವ ಮಾನನಷ್ಟ ಪ್ರಕರಣವನ್ನು ರದ್ದುಪಡಿಸುವಂತೆ ಎಚ್. ವಿಶ್ವನಾಥ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಕೆಳ ನ್ಯಾಯಾಲಯದಲ್ಲಿ ದಾಖಲಾಗಿರುವ ಸಿವಿಲ್ ಮಾನನಷ್ಟ ಪ್ರಕರಣದ ವಿಚಾರಣೆಯನ್ನು ಈ ಹಂತದಲ್ಲಿ ರದ್ದುಪಡಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿ, ವಿಶ್ವನಾಥ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ತಳ್ಳಿಹಾಕಿದೆ.

ಮುಡಾ ವಿಚಾರದಲ್ಲಿ ಆರೋಪ-ಪ್ರತ್ಯಾರೋಪ

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ ನಿವೇಶನ ಹಂಚಿಕೆ ವಿವಾದ ತೀವ್ರವಾಗಿದ್ದ ಸಂದರ್ಭದಲ್ಲಿ ಎಚ್. ವಿಶ್ವನಾಥ್ ಅವರು ಅಂದು ನಗರಾಭಿವೃದ್ಧಿ ಸಚಿವರಾಗಿದ್ದ ಬೈರತಿ ಸುರೇಶ್ ವಿರುದ್ಧ ಗಂಭೀರ ಭ್ರಷ್ಟಾಚಾರದ ಆರೋಪಗಳನ್ನು ಮಾಡಿದ್ದರು.

ಬೈರತಿ ಸುರೇಶ್ ಅವರು ಮುಡಾ ಕಚೇರಿಗೆ ಭೇಟಿ ನೀಡಿದ ಬಳಿಕವೂ ನೂರಾರು ಅಕ್ರಮ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ ಎಂದು ವಿಶ್ವನಾಥ್ ಆರೋಪಿಸಿದ್ದರು. ಈ ಆರೋಪಗಳು ಆಧಾರರಹಿತವಾಗಿದ್ದು, ನಿರಂತರ ಆರೋಪಗಳಿಂದ ತಮ್ಮ ತೇಜೋವಧೆಯಾಗಿದೆ ಎಂದು ಆರೋಪಿಸಿದ್ದ ಬೈರತಿ ಸುರೇಶ್, ವಿಶ್ವನಾಥ್ ವಿರುದ್ಧ ಬೆಂಗಳೂರಿನ ಸಿವಿಲ್ ಕೋರ್ಟ್‌ನಲ್ಲಿ ₹50 ಕೋಟಿ ಪರಿಹಾರ ಕೋರಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.

ನಾನೇ ಕೋರ್ಟ್‌ನಲ್ಲಿ ಎದುರಿಸುತ್ತೇನೆ’ ಎಂದಿದ್ದ ವಿಶ್ವನಾಥ್

ಈ ಹಿಂದೆ ಮಾನನಷ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ನೋಟಿಸ್ ಜಾರಿಯಾದಾಗ ಪ್ರತಿಕ್ರಿಯಿಸಿದ್ದ ಎಚ್. ವಿಶ್ವನಾಥ್, ತಾವು ಕಾನೂನು ವಿದ್ಯಾರ್ಥಿಯಾಗಿದ್ದು, ಪ್ರಕರಣವನ್ನು ನ್ಯಾಯಾಲಯದಲ್ಲಿ ತಾವೇ ಎದುರಿಸುವುದಾಗಿ ಹೇಳಿದ್ದರು. “ನಾನೂ ಕೂಡ ಕಾನೂನು ವಿದ್ಯಾರ್ಥಿ. ಕೋರ್ಟ್‌ನಲ್ಲಿ ಈ ಪ್ರಕರಣವನ್ನು ನಾನೇ ಖುದ್ದಾಗಿ ಎದುರಿಸುತ್ತೇನೆ” ಎಂದು ವಿಶ್ವನಾಥ್ ಸವಾಲು ಹಾಕಿದ್ದರು.

ಇದೀಗ ಪ್ರಕರಣವನ್ನು ರದ್ದುಪಡಿಸುವಂತೆ ಅವರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿರುವುದು ಬೈರತಿ ಸುರೇಶ್ ಮತ್ತು ವಿಶ್ವನಾಥ್ ನಡುವಿನ ಕಾನೂನು ಹೋರಾಟಕ್ಕೆ ಮತ್ತೊಂದು ತಿರುವು ನೀಡಿದೆ.

Related posts