ಅನುಮತಿ ಇಲ್ಲದೆ ಪ್ರಯೋಗಾಲಯ ಕಾರ್ಯಾಚರಣೆ: ಸಚಿವ ರಾಮಲಿಂಗಾ ರೆಡ್ಡಿ ದಿಢೀರ್ ಪರಿಶೀಲನೆ

ಬೆಂಗಳೂರು: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (KSPCB)ಯ ಹಿರಿಯ ಅಧಿಕಾರಿಗಳೊಂದಿಗೆ ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಸಚಿವ ರಾಮಲಿಂಗಾ ರೆಡ್ಡಿ ಅವರು ಬೆಂಗಳೂರಿನ ಅನಾಲಿಟಿಕ್ಸ್ ಅಂಡ್ ರಿಸರ್ಚ್ ಲ್ಯಾಬೊರೇಟರಿ ಪ್ರೈವೇಟ್ ಲಿಮಿಟೆಡ್‌ಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪರಿಶೀಲನೆ ವೇಳೆ ಪ್ರಯೋಗಾಲಯದ ಕಾರ್ಯನಿರ್ವಹಣೆ ಹಾಗೂ ದಾಖಲೆಗಳಿಗೆ ಸಂಬಂಧಿಸಿದ ಹಲವು ಲೋಪಗಳು ಕಂಡುಬಂದಿವೆ ಎಂದು ಸಚಿವರು ತಿಳಿಸಿದ್ದಾರೆ.

ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದಿಂದ (MoEF&CC) ಪೂರ್ವಾನುಮತಿ ಪಡೆಯುವ ಸಂದರ್ಭದಲ್ಲಿ ಮೂವರು ವಿಶ್ಲೇಷಕರು ಕಾರ್ಯನಿರ್ವಹಿಸಲಿದ್ದಾರೆ ಎಂದು ಸಂಸ್ಥೆ ಮಾಹಿತಿ ನೀಡಿತ್ತು. ಆದರೆ ಪರಿಶೀಲನೆ ವೇಳೆ ಒಬ್ಬ ವಿಶ್ಲೇಷಕ ಮಾತ್ರ ಹಾಜರಿದ್ದು, ಉಳಿದ ಇಬ್ಬರು ಕಳೆದ ಐದು ತಿಂಗಳಿಂದ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿಲ್ಲ ಎಂಬುದು ಬೆಳಕಿಗೆ ಬಂದಿದೆ.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಪಡೆದಿದ್ದ ‘Consent for Establishment’ (CFE) ಅನುಮತಿಯ ಅವಧಿ 2025ರಲ್ಲೇ ಮುಕ್ತಾಯಗೊಂಡಿದ್ದರೂ, ಮಂಡಳಿಯ ಅನುಮತಿಯಿಲ್ಲದೆ ಸಂಸ್ಥೆ ಕಾರ್ಯನಿರ್ವಹಿಸುತ್ತಿರುವುದು ಕಂಡುಬಂದಿದೆ ಎಂದು ಸಚಿವರು ತಿಳಿಸಿದ್ದಾರೆ.

ಪ್ರಯೋಗಾಲಯದ ಚಟುವಟಿಕೆಗಳಿಂದ ಉತ್ಪತ್ತಿಯಾಗುವ ತ್ಯಾಜ್ಯವನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುವ ವ್ಯವಸ್ಥೆಯ ಬದಲಿಗೆ ತೆರೆದ ಗುಂಡಿಗೆ ಹರಿಸಲಾಗುತ್ತಿರುವುದೂ ಪರಿಶೀಲನೆ ವೇಳೆ ಗಮನಕ್ಕೆ ಬಂದಿದೆ ಎಂದು ಹೇಳಿದ್ದಾರೆ.

ವಿಶ್ಲೇಷಣಾ ವರದಿಗಳ ವಿಶ್ವಾಸಾರ್ಹತೆ ಬಗ್ಗೆ ಅನುಮಾನ

ಸಂಸ್ಥೆಯ ದಾಖಲೆಗಳನ್ನು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB)ಯ ವಿಶ್ಲೇಷಣಾ ದರಪಟ್ಟಿಯೊಂದಿಗೆ ಹೋಲಿಸಿದಾಗ, ಎಸ್‌ಟಿಪಿ ಘಟಕದ ನೀರಿನ ಮಾದರಿ ವಿಶ್ಲೇಷಣೆಗೆ ₹5,000 ಹಾಗೂ ಕೈಗಾರಿಕೆಗಳ ವಾಯುಮಾಲಿನ್ಯ ಮಾದರಿ ಸಂಗ್ರಹಣೆ ಮತ್ತು ವಿಶ್ಲೇಷಣೆಗೆ ₹13,000 ದರ ನಿಗದಿಯಾಗಿರುವುದು ಕಂಡುಬಂದಿದೆ. ಆದರೆ ಪ್ರಯೋಗಾಲಯವು ಮಾದರಿ ಸಂಗ್ರಹಣೆ ಮತ್ತು ವಿಶ್ಲೇಷಣೆಯನ್ನು ಕ್ರಮವಾಗಿ ₹1,000 ಹಾಗೂ ₹650ಕ್ಕೆ ನಡೆಸಿರುವುದು ದಾಖಲೆಗಳ ಪರಿಶೀಲನೆಯಲ್ಲಿ ಪತ್ತೆಯಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಇದೇ ವೇಳೆ ಶಬ್ದಮಟ್ಟದ ಅಳತೆಯಲ್ಲಿ ಸ್ಥಳದಲ್ಲಿ ಸಂಗ್ರಹಿಸಿದ ಮಾಹಿತಿಗೂ ಅಂತಿಮ ವಿಶ್ಲೇಷಣಾ ವರದಿಯಲ್ಲಿ ದಾಖಲಿಸಿರುವ ಮಾಹಿತಿಗೂ ವ್ಯತ್ಯಾಸ ಕಂಡುಬಂದಿದೆ ಎಂದು ಅವರು ಹೇಳಿದ್ದಾರೆ.

ಈ ಹಿನ್ನೆಲೆಯಲ್ಲಿ ಪ್ರಯೋಗಾಲಯ ನೀಡಿರುವ ವಿಶ್ಲೇಷಣಾ ವರದಿಗಳ ವಿಶ್ವಾಸಾರ್ಹತೆ ಕುರಿತು ಅನುಮಾನಗಳು ಮೂಡಿದ್ದು, ಸಂಪೂರ್ಣ ತನಿಖೆಗೆ ಆದೇಶಿಸಲಾಗಿದೆ ಎಂದು ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.

ರಾಜ್ಯದಲ್ಲಿ ನೀರು, ವಾಯು ಹಾಗೂ ಶಬ್ದ ಮಾದರಿಗಳ ಸಂಗ್ರಹಣೆ ಮತ್ತು ವಿಶ್ಲೇಷಣೆ ನಡೆಸುತ್ತಿರುವ ಸುಮಾರು 50 ಪ್ರಯೋಗಾಲಯಗಳಿವೆ. ಈ ಪ್ರಯೋಗಾಲಯದ ಪರಿಶೀಲನೆಯನ್ನು ಪ್ರಾಯೋಗಿಕ ಪ್ರಕರಣವಾಗಿ ಪರಿಗಣಿಸಲಾಗಿದ್ದು, ಇತರ ಪ್ರಯೋಗಾಲಯಗಳಿಗೂ ಇದು ಎಚ್ಚರಿಕೆಯಾಗಿದೆ ಎಂದು ಸಚಿವರು ಹೇಳಿದ್ದಾರೆ.

ರಾಜ್ಯದ ಉಳಿದ ಎಲ್ಲ ಪ್ರಯೋಗಾಲಯಗಳ ಕಾರ್ಯವೈಖರಿ ಹಾಗೂ ದಾಖಲೆಗಳನ್ನೂ ಸಮಗ್ರವಾಗಿ ಪರಿಶೀಲಿಸುವಂತೆ KSPCB ಅಧ್ಯಕ್ಷರು ಮತ್ತು ಸದಸ್ಯ ಕಾರ್ಯದರ್ಶಿಗಳಿಗೆ ಸಚಿವರು ನಿರ್ದೇಶನ ನೀಡಿದ್ದಾರೆ.

Related posts