ಹುಟ್ಟುಹಬ್ಬ ಆಚರಣೆಗೆ ಕಿಚ್ಚ ಸುದೀಪ್ ಬ್ರೇಕ್; ಅಭಿಮಾನಿಗಳಿಗೆ ಭಾವನಾತ್ಮಕ ಸಂದೇಶ

ಬೆಂಗಳೂರು: ಸೆಪ್ಟೆಂಬರ್ 2ರಂದು ನಡೆಯಲಿರುವ ತಮ್ಮ ಹುಟ್ಟುಹಬ್ಬವನ್ನು ಈ ಬಾರಿ ಅಭಿಮಾನಿಗಳೊಂದಿಗೆ ಆಚರಿಸಿಕೊಳ್ಳದಿರಲು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಿರ್ಧರಿಸಿದ್ದಾರೆ. ವೈಯಕ್ತಿಕ ಕಾರಣಗಳಿಂದಾಗಿ ಅಂದು ತಾವು ಮನೆಯಲ್ಲಿ ಲಭ್ಯವಿರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳಿಗೆ ಭಾವನಾತ್ಮಕ ಸಂದೇಶ ಹಂಚಿಕೊಂಡಿರುವ ಸುದೀಪ್, ಸೆಪ್ಟೆಂಬರ್ 2 ಸಾಮಾನ್ಯ ದಿನಾಂಕವಾಗಿದ್ದರೂ, ಕಳೆದ 30 ವರ್ಷಗಳಿಂದ ಅದನ್ನು ಸಂಭ್ರಮವನ್ನಾಗಿ ಮಾಡಿದ್ದು ಅಭಿಮಾನಿಗಳ ಪ್ರೀತಿ ಎಂದು ಹೇಳಿದ್ದಾರೆ.

“ನಿಮ್ಮ ಅಭಿಮಾನ, ಹುಚ್ಚು ಪ್ರೀತಿಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು. ಪ್ರತಿ ಸಿನಿಮಾ, ಬಿಗ್‌ಬಾಸ್ ಹಾಗೂ ಯಾವುದೇ ಕಾರ್ಯಕ್ರಮಕ್ಕೆ ಮುಂದಾದಾಗಲೂ ನೀವು ತೋರಿಸಿದ ಪ್ರೀತಿ ಅಪರಿಮಿತ. ಅದೇ ನನಗೆ ಶ್ರೀರಕ್ಷೆ” ಎಂದು ಸುದೀಪ್ ಹೇಳಿದ್ದಾರೆ.

ತಮ್ಮ ಹಾಗೂ ಅಭಿಮಾನಿಗಳ ನಡುವಿನ ಬಾಂಧವ್ಯವನ್ನು ಯಾರಿಂದಲೂ ಬೇರ್ಪಡಿಸಲು ಸಾಧ್ಯವಿಲ್ಲ. ಶೀಘ್ರದಲ್ಲೇ ಎಲ್ಲರನ್ನೂ ಮುಖಾಮುಖಿಯಾಗಿ ಭೇಟಿಯಾಗುವುದಾಗಿ ಅವರು ಭರವಸೆ ನೀಡಿದ್ದಾರೆ.

ಕನ್ನಡ ಚಿತ್ರರಂಗಕ್ಕೆ ಮೂರು ದಶಕಗಳನ್ನು ಅರ್ಪಿಸಿಕೊಂಡಿರುವ ಸುದೀಪ್, ಸಿನಿಮಾ ತಮ್ಮ ಪರಮ ಕಾಯಕ ಎಂದು ಹೇಳಿದ್ದಾರೆ. ಕೆಲವೊಮ್ಮೆ ತಡವಾಗಬಹುದು, ಅದಕ್ಕೂ ಕಾರಣಗಳಿರುತ್ತವೆ ಎಂದು ಸ್ಪಷ್ಟಪಡಿಸಿದ್ದಾರೆ.

To all those lovable ones who have been celebrating my bday n me for years.. Heartfelt thanks ❤️.

There are several reasons for me putting out this request in form of a letter.
Hope it’s understood & taken in th right spirit .

Much much luv to one n all❤️ pic.twitter.com/j9TKurIq0Y

— Kichcha Sudeepa (@KicchaSudeep) August 27, 2026

“ಸಿಂಹ ಸುಮ್ಮನೆ ಕುಳಿತಿದೆ ಎಂದರೆ ಸುಸ್ತಾಗಿದೆ ಅಂತಲ್ಲ, ಮುಂದಿನ ಬೇಟೆಗೆ ರೆಡಿಯಾಗ್ತಿದೆ ಎಂದರ್ಥ” ಎಂಬ ತಮ್ಮದೇ ಸಿನಿಮಾದ ಸಂಭಾಷಣೆಯನ್ನು ಉಲ್ಲೇಖಿಸಿರುವ ಸುದೀಪ್, ಅಭಿಮಾನಿಗಳಿಗೆ ಮತ್ತಷ್ಟು ಮನರಂಜನೆ ನೀಡುವ ಭರವಸೆ ನೀಡಿದ್ದಾರೆ.

“ಕನ್ನಡ ನನ್ನ ಸತ್ಯ.. ಕನ್ನಡದಿಂದ ನಾನು ನಿತ್ಯ” ಎಂದು ಹೇಳುವ ಮೂಲಕ ತಮ್ಮ ಕನ್ನಡಾಭಿಮಾನವನ್ನೂ ಮತ್ತೊಮ್ಮೆ ವ್ಯಕ್ತಪಡಿಸಿದ್ದಾರೆ.

Related posts