ಜನಪ್ರಿಯ ಕ್ರೀಡೆ ಕಂಬಳವನ್ನು ಬೆಂಗಳೂರಿನಲ್ಲಿ ಪ್ರತಿ ವರ್ಷ ಮುಂದುವರೆಸುವಂತಾಗಬೇಕು

ಬೆಂಗಳೂರು: ಜನಪ್ರಿಯ ಕ್ರೀಡೆ ಕಂಬಳವನ್ನು ಬೆಂಗಳೂರಿನಲ್ಲಿ ಪ್ರತಿ ವರ್ಷ ಮುಂದುವರೆಸುವಂತಾಗಬೇಕು ಎಂದು ಸಿಎಂ ಸಿದ್ದರಾಮಯ್ಯ ಅಭಿಪ್ರಾಯ ಪಟ್ಟಿದ್ದಾರೆ. 

ಬೆಂಗಳೂರಿನಲ್ಲಿ ಕಂಬಳ ಉತ್ಸವ ಹಾಗೂ ತುಳುನಾಡಿನ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕರ್ನಾಟಕದಲ್ಲಿ ತುಳು ಭಾಷೆಗೆ ಹೆಚ್ಚುವರಿ ಭಾಷೆಯ ಸ್ಥಾನಮಾನ ದೊರಕಬೇಕೆಂದು ಕೋರಿಕೆಯಿದ್ದು ಈ ಬಗ್ಗೆ ಕನ್ನಡ ಮತ್ತು ಸಂಸ್ಕೃತಿ ಸಚಿವರೊಂದಿಗೆ ಚರ್ಚಿಸಿ ತೀರ್ಮಾನಿಸುತ್ತೇವೆ. ಕಂಬಳ ಕರಾವಳಿ ಭಾಗದ ಜನಪ್ರಿಯ ಕ್ರೀಡೆ. ಮಂಗಳೂರು, ಉಡುಪಿ ಜಿಲ್ಲೆಗಳ ಜಾನಪದ ಕ್ರೀಡೆ. ಅಶೋಕ್ ರೈ ಅವರ ನೇತೃತ್ವದಲ್ಲಿ ಕರಾವಳಿ ಪ್ರದೇಶದ ಜಾನಪದ ಕ್ರೀಡೆಯನ್ನು ಬೆಂಗಳೂರು ನಗರಕ್ಕೆ ಪರಿಚಯಿಸುವುದು ನಿಜಕ್ಕೂ ಶ್ಲಾಘನೀಯ ಎಂದರು.‌

ಕಂಬಳ ನೋಡಲು ಇಷ್ಟು ಜನರು ಆಗಮಿಸುವ ನಿರೀಕ್ಷೆ ಇರಲಿಲ್ಲ. ಕಂಬಳ ಕರಾವಳಿ ಪ್ರದೇಶದ ಕ್ರೀಡೆಯಾದಾರೂ ಬೆಂಗಳೂರಿನಲ್ಲಿ ಲಕ್ಷಾಂತರ ಜನ ಕರಾವಳಿ ಪ್ರದೇಶದವರು ವಾಸಿಸುತ್ತಿದ್ದು ಅವರಿಗೆ ಮಾತ್ರವಲ್ಲದೇ ಬೆಂಗಳೂರಿನ ಜನ ಸೇರಿದಂತೆ ರಾಜ್ಯದ ಮೂಲೆ ಮೂಲೆಯಿಂದ ಬಂದು ನೋಡುವ, ಪ್ರೋತ್ಸಾಹಿಸುವ ಅವಕಾಶ ದೊರೆತಿದೆ ಎಂದರು.

ಹಿಂದೊಮ್ಮೆ ಉಡುಪಿ ಹಾಗೂ ಬಂಟ್ವಾಳ ಭಾಗದಲ್ಲಿ ಕಂಬಳ ಉದ್ಘಾಟಿಸಿದ್ದೆ. ಪುರಾತನ ಕಾಲದಿಂದ ನಡೆದುಕೊಂಡು ಬಂದಿರುವ ಜನರ ಕಲೆಯನ್ನು ಬಹಳ ಜನ ಮೈಗೂಡಿಸಿಕೊಂಡಿದ್ದಾರೆ. ಬಹಳ ಜನ ಇದಕ್ಕೆ ಪ್ರೋತ್ಸಾಹ ನೀಡುತ್ತಾರೆ. ತಮಿಳುನಾಡಿನಲ್ಲಿ ಜಲ್ಲಿಕಟ್ಟು ಕ್ರೀಡೆ ಇದ್ದಂತೆ ಕಂಬಳದಲ್ಲಿ ಕೋಣಗಳಿಗೆ ನೊಗ ಹಾಕಿ ಓಡಿಸುತ್ತಾರೆ. ಕೋಣಗಳನ್ನು ಸಾಕುವುದು ಬಹಳ ಕಷ್ಟದ ಕೆಲಸ. ಕೋಣ ಸಾಕಲು ಒಂದು ವರ್ಷಕ್ಕೆ 15 ಲಕ್ಷದವರೆಗೆ ವೆಚ್ಚವಾಗುತ್ತದೆ. ತಿಂಗಳಿಗೆ 1 ಲಕ್ಷಕ್ಕಿಂತ ಹೆಚ್ಚಾಗುತ್ತದೆ. ನವೆಂಬರ್, ಡಿಸೆಂಬರ್, ಫೆಬ್ರವರಿ ಮಾರ್ಚ್ ತಿಂಗಳುಗಳಲ್ಲಿ ವ್ಯವಸಾಯ ಇಲ್ಲದಿದ್ದಾಗ ಜನ ಜಾನುವಾರುಗಳ ಉತ್ಸವ ಮಾಡಿ ಮನರಂಜನೆ ಪಡೆಯುತ್ತಿದ್ದರು ಎಂದರು.

ಗದ್ದೆಗಳಲ್ಲಿ ಮಣ್ಣನ್ನು ಹದಗೊಳಿಸಿ ಕಂಬಳ ಆಡಿಸುತ್ತಿದ್ದರು. ಕೋಣಗಳನ್ನು ಓಡುವವರಿಗೆ ಅಭ್ಯಾಸವಿರಬೇಕು. ಕ್ರೀಡಾಪಟುವಾಗಿದ್ದರೆ ಮಾತ್ರ ಕೋಣಗಳ ಜೊತೆಗೆ ಓಡಲು ಸಾಧ್ಯ. ಜನಪ್ರಿಯ ಕ್ರೀಡೆ ಕಂಬಳವನ್ನು ಬೆಂಗಳೂರಿನಲ್ಲಿ ಪ್ರತಿ ವರ್ಷ ಮುಂದುವರೆಸುವಂತಾಗಬೇಕು ಎಂದ ಸಿಎಂ, ನವೆಂಬರ್, ಡಿಸೆಂಬರ್ ಮಾಹೆಯಲ್ಲಿ ಆಯೋಜಿಸಿದರೆ ಜನ ನೋಡುತ್ತಾರೆ. ಇದೊಂದು ಮನರಂಜನೆಯ ಕ್ರೀಡೆಯಾಗುತ್ತದೆ ಎಂದರು.

ಜಲ್ಲಿಕಟ್ಟು, ಕಂಬಳ ನಡೆಸಬಾರದು ಎಂದು ನ್ಯಾಯಾಲಯ ತೀರ್ಪು ನೀಡಿದೆ. ಇದಕ್ಕೆ ಸುಗ್ರೀವಾಜ್ಞೆ ಹೊರಡಿಸಿ ಜನಪ್ರಿಯ ಕ್ರೀಡೆ ಉಳಿಸುವ ಕೆಲಸವಾಗಿದೆ. ಇದನ್ನು ಬೆಳಸಬೇಕು. ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ಸಮುದಾಯ ಭವನಕ್ಕಾಗಿ ನಿವೇಶನ ಕೋರಿದ್ದು, ಇದಕ್ಕೂ ನಾವು ಪ್ರಯತ್ನ ಮಾಡುತ್ತೇವೆ ಎಂದವರು ಹೇಳಿದರು.

Related posts