ಶಾಸಕ ರಾಮದಾಸ್ ಮಾದರಿ ಕೆಲಸ; ಕರೆ ಮಾಡಿದ ತನ್ನ ಕ್ಷೇತ್ರದ ಜನರಿಗೆ ತಕ್ಷಣ ನೆರವು

ಮೈಸೂರು: ಕೊರೋನಾ ಹಾವಳಿಯಿಂದಾಗಿ ಇಡೀ ದೇಶವೇ ನಲುಗಿದೆ. ಮರಣ ಮೃದಂಗ ಭಾರಿಸುತ್ತಿರುವ ಕೊರೋನಾ ವೈರಾಣು ಎಲ್ಲೆಲ್ಲೂ  ಭೀತಿಯ ಅಲೆ ಎಬ್ಬಿಸಿದೆ.

ಇದೇ ಸಂದರ್ಭದಲ್ಲಿ ಮೈಸೂರಿನಲ್ಲಿ ಶಾಸಕ ಎಸ್.ಎ.ರಾಮದಾಸ್ ಅವರ ಮಾದರಿ ರಾಜ್ಯದ ಜನರ ಕುತೂಹಲದ ಬಿಂದುವಾಗಿದೆ. ಸ್ಥಳೀಯ ಅಧಿಕಾರಿಗಳು ಹಾಗೂ ಮುಖಂಡರ ಜೊತೆ ತಮ್ಮ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಜನರ ಸಂಕಷ್ಟ ಆಲಿಸುತ್ತಿರುವ ಇವರಿಗೆ ಅಹವಾಲುಗಳ ಮಹಾಪೂರವೇ ಹರಿದುಬರುತ್ತಿವೆ. ಬಹಳಷ್ಟು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಸೂಚಿಸುತ್ತಿರುವ ಮಾಜಿ ಸಚಿವರೂ ಆದ ರಾಮದಾಸ್, ಅಗತ್ಯ ವಸ್ತುಗಳ ಪೂರೈಕೆ ಮೂಲಕ ತನ್ನಿಂದಾದ ನೆರವನ್ನೂ ನೀಡುತ್ತಿದ್ದಾರೆ.

ಗುಂಪಾಗಿ ಜನ ಸೇರುವಂತಿಲ್ಲ. ಸಾರ್ವಜನಿಕ ಸಭೆಯನ್ನೂ ನಡೆಸುವಂತಿಲ್ಲ. ಜನಸಂಪರ್ಕ ಸಭೆ ನಡೆಸಿ ಜನತಾ ದರ್ಶನ ನಡೆಸಲು ಅವಕಾಶವೇ ಇಲ್ಲ. ಹೀಗಿದ್ದರೂ ಜನ ಸಂಪರ್ಕದಿಂದ ದೂರವಿರಬಾರದೆಂಬ ಹಿನ್ನೆಲೆಯಲ್ಲಿ ಫೋನ್ ಇನ್ ಕಾರ್ಯಕ್ರಮ ನಡೆಸುತ್ತಿದ್ದಾರೆ.

ಸೋಮವಾರ ಸಂಜೆ ಕೂಡಾ ಶಾಸಕ ರಾಮದಾಸ್ ಅವರು ತಮ್ಮ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಜನರಿಗಾಗಿ, ಹಾಲೋ ಶಾಸಕರೇ ಎಂಬ ಫೋನ್ ಇನ್ ಕಾರ್ಯಕ್ರಮ ಆಯೋಜಿಸಿದ್ದಾರೆ. ಸಂಜೆ 6 ರಿಂದ 7 ಗಂಟೆ ನಡುವೆ  0821 4001100 ನಂಬರಿಗೆ ಫೋನ್ ಮಾಡಿದಲ್ಲಿ ಶಾಸಕರೇ ಕರೆ ಸ್ವೀಕರಿಸಿ ಜನರ ಸಮಸ್ಯೆಗಳಿಗೆ ಸ್ಪಂದಿಸಲಿದ್ದಾರೆ.

ಜನರು ತಮ್ಮ ಮನೆಗಳಲ್ಲೇ ಉಳಿದು ಶಾಸಕರನ್ನು ಸಂಪರ್ಕಿಸಬಹುದೆಂಬುದು ರಾಮದಾಸ್ ಅವರ ಹೇಳಿಕೆ. ಲಾಕ್ ಡೌನ್ ಸಂದರ್ಭದಲ್ಲಿ ಎದುರಿಸುತ್ತಿರುವ ಸಮಸ್ಯೆಗಳನ್ನು ಪಿನೋಣಿ ಕರೆ ಮಾಡಿ ತಮ್ಮ ಗಮನಕ್ಕೆ ತರಬಹುದೆಂದು ಶಾಸಕರು ತಿಳಿಸಿದ್ದಾರೆ.

Related posts