ಕರ್ನಾಟಕವನ್ನು ದೇಶದಲ್ಲೇ ಉತ್ತಮ ಆರೋಗ್ಯ ಸೌಲಭ್ಯದ ರಾಜ್ಯವಾಗಿಸುವ ಗುರಿ

ಬೆಂಗಳೂರು: ಪ್ರತಿ ಕನ್ನಡಿಗನಿಗೆ ಉಚಿತ ಹಾಗೂ ಗುಣಮಟ್ಟದ ಆರೋಗ್ಯ ಸೇವೆ ಸಿಗಬೇಕು ಎನ್ನುವ ಗುರಿಯೊಂದಿಗೆ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ. .

ಪ್ರಾಥಮಿಕ ಆರೋಗ್ಯ ಕೇಂದ್ರಗಳ ಉನ್ನತೀಕರಣ ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಗುರುವಾರ ಗೃಹಕಚೇರಿ ಕೃಷ್ಣಾದಲ್ಲಿ ಸಭೆ ನಡೆಯಿತು. ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಡಾ.ಕೆ.ಸುಧಾಕರ್, ಕೇರಳ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಸಮುದಾಯ ಆರೋಗ್ಯ ಸೇವೆ ಉತ್ತಮವಾಗಿದೆ ಎಂದು ಜನರು ಮಾತನಾಡುತ್ತಾರೆ. ಆದರೆ ಇಡೀ ದೇಶದಲ್ಲಿ ಕರ್ನಾಟಕದ ಆರೋಗ್ಯ ಸೇವೆ ಉತ್ತಮ ಹಾಗೂ ಮಾದರಿಯಾಗಿರಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕನಸು ಕಂಡಿದ್ದಾರೆ. ಈ ಕನಸಿಗೆ ಪೂರಕವಾಗಿ ಯೋಜನೆ ರೂಪಿಸಲಾಗಿದೆ ಎಂದರು.

ರಾಜ್ಯದಲ್ಲಿ 2,380 ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. 30 ಸಾವಿರ ಜನಸಂಖ್ಯೆಗೆ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರ ಇದೆ. ಇದರಲ್ಲಿ ಅಸಮತೋಲನವಿದ್ದರೆ ಹೊಸ ಕೇಂದ್ರ ನಿರ್ಮಾಣ ಹಾಗೂ ಅಸ್ವಿತ್ವದಲ್ಲಿರುವ ಕೇಂದ್ರಗಳನ್ನು ಮೇಲ್ದರ್ಜೆಗೇರಿಸುವುದು ಹೊಸ ಯೋಜನೆಯ ಉದ್ದೇಶ. ಪಿಎಚ್ ಸಿಯಲ್ಲಿ 6 ಹಾಸಿಗೆ ಇದ್ದು, ಅದನ್ನು 12 ರಿಂದ 20 ಹಾಸಿಗೆಗೆ ಹೆಚ್ಚಿಸಲಾಗುವುದು. ಪಿಎಚ್ ಸಿಯಲ್ಲಿ ಒಬ್ಬ ವೈದ್ಯ ಇದ್ದು, ಈ ಸಂಖ್ಯೆಯನ್ನು ಕನಿಷ್ಠ 3-4 ಕ್ಕೆ ಹೆಚ್ಚಿಸಲಾಗುವುದು. ಈ ಪೈಕಿ ಒಬ್ಬ ಮಹಿಳಾ ವೈದ್ಯೆ ಹಾಗೂ ಮತ್ತೊಬ್ಬರು ಆಯುಷ್ ವೈದ್ಯರಿರುತ್ತಾರೆ ಎಂದು ವಿವರಿಸಿದರು.

ಉತ್ತಮ ವಸತಿ ಕಲ್ಪಿಸದ ಕಾರಣಕ್ಕೆ ಅನೇಕ ವೈದ್ಯರು ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಸಲ್ಲಿಸಲು ಹಿಂದೇಟು ಹಾಕುತ್ತಿದ್ದರು. ಒಂದೇ ಸಮುಚ್ಛಯದಲ್ಲಿ ನರ್ಸ್, ವೈದ್ಯರಿಗೆ ವಸತಿ, ಇತರೆ ಆರೋಗ್ಯ ಸಿಬ್ಬಂದಿಗೆ ವಸತಿ ಕಲ್ಪಿಸಲಾಗುತ್ತದೆ. 2 ಎಕರೆ ಪ್ರದೇಶದಲ್ಲಿ 6-8 ಕೋಟಿ ರೂ. ಖರ್ಚು ಮಾಡಿ ಹೊಸ ಪಿಎಚ್ ಸಿ ನಿರ್ಮಿಸಲಾಗುತ್ತದೆ. 20 ಸಾವಿರ ಚದರ ಮೀಟರ್ ಆಡಳಿತ ಕಟ್ಟಡ, 12 ಹಾಸಿಗೆಯ ವಿಭಾಗ, ತಾಯಿ ಮತ್ತು ಶಿಶು ಕಾಳಜಿ ಕೇಂದ್ರ, ಪ್ರಯೋಗಾಲಯ ಇರಲಿದೆ. ಮಧುಮೇಹ ಪರೀಕ್ಷೆ, ರಕ್ತ ಪರೀಕ್ಷೆ ಸೇರಿದಂತೆ ನಾನಾ ಪರೀಕ್ಷೆಗಳನ್ನು ಉಚಿತವಾಗಿ ಮಾಡುವ ವ್ಯವಸ್ಥೆ ಇರಲಿದೆ. ರಾಷ್ಟ್ರೀಯ ಆರೋಗ್ಯ ಅಭಿಯಾನದ ಅನುದಾನ ಬಳಸಿ ಉಚಿತ ಸೇವೆ ನೀಡಲಾಗುವುದು ಎಂದು ಸಚಿವ ಸುಧಾಕರ್ ವಿವರಿಸಿದರು.

Related posts