ರಾಜ್ಯದಲ್ಲಿ ಕೊರೋನಾಗೆ ಮತ್ತೊಂದು ಬಲಿ; ಸಾವಿನ ಸಂಖ್ಯೆ 3ಕ್ಕೆ ಏರಿಕೆ

ಬೆಂಗಳೂರು: ಕರಾವಳಿಯಲ್ಲಿ ತಲ್ಲಣ ಸೃಷ್ಟಿಸುತ್ತಿರುವ ಕೊರೋನಾ ವೈರಸ್ ಕರುನಾಡಿನಲ್ಲಿ ಸಾವಿನ ಸರಣಿಯನ್ನು ಮುಂದುವರಿಸಿವೆ. ಇಂದು ಕಲ್ಪತರುನಾಡಿನಲ್ಲಿ ಮತ್ತೊಬ್ಬರು ಕೋವಿಡ್-19 ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಮಹಾಮಾರಿ ಕೊರೋನಾ ಸೋಂಕಿಗೆ ಬಲಿಯಾದವರ ಸಂಖ್ಯೆ 3ಕ್ಕೇರಿದೆ.

ಕೆಲ ದಿನಗಳ ಹಿಂದಷ್ಟೇ ಕಲಬುರ್ಗಿ ಹಾಗೂ ಗೌರೀಬಿದನೂರಿನಲ್ಲಿ ಕೊರೋನಾ ಸೋಂಕಿತರು ಸಾವನ್ನಪ್ಪಿರುವ ಸುದ್ದಿಯ ನೆನಪು ಮಾಸುವ ಮುನ್ನವೇ ತುಮಕೂರಿನ ವ್ಯಕ್ತಿಯನ್ನು ಕೋವಿಡ್-19 ವೈರಸ್ ಬಲಿಪಡೆದಿದೆ. ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೃತಪಟ್ಟ ವ್ಯಕ್ತಿಗೆ  65 ವರ್ಷ ವಯಸ್ಸಾಗಿತ್ತು

ಶಿರಾ ಮೂಲದ 60 ವರ್ಷದ ವ್ಯಕ್ತಿ ಮಾರ್ಚ್ 24ರಂದು ಈ ವ್ಯಕ್ತಿ ಆಸ್ಪತ್ರೆಗೆ ದಾಖಲಾಗಿದ್ದರು. ಶುಕ್ರವಾರ ಬೆಳಗ್ಗೆ 10.45ರ ಸುಮಾರಿಗೆ ವ್ಯಕ್ತಿ ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ. ರಾಕೇಶ್ ಕುಮಾರ್ ತಿಳಿಸಿದ್ದಾರೆ.

ಕೆಲ ದಿನಗಳ ಹಿಂದೆ ಕಲುಬುರಗಿಯಲ್ಲೂ ಇಳಿ ವಯಸ್ಸಿನ ವ್ಯಕ್ತಿಯೊಬ್ಬರು ಕೊರೋನಾ ಸೋಂಕಿಗೊಳಗಾಗಿ ಸಾವನ್ನಪ್ಪಿದ್ದರು. ಅದಾದ ನಂತರ  ಗೌರಿಬಿದನೂರು ಆಗಮಿಸಿದ್ದ ಆಂಧ್ರ ಮೂಲದ ವೃದ್ಧೆಯೊಬ್ಬರು ಈ ವಾರದ ಆರಂಭದಲ್ಲಿ ಮೃತಪಟ್ಟಿದ್ದರು. ಇದೀಗ ತುಮಕೂರಿನಲ್ಲೂ ವೃದ್ಧರೊಬ್ಬರು ಸಾವಿಗೀಡಾಗಿದ್ದು, ರಾಜ್ಯದಲ್ಲಿ ಒಂದೇ ವಾರದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಈ ಸರಣಿ ಸಾವಿನ ನಂತರ ರಾಜ್ಯಾದ್ಯಂತ ಹೈ  ಅಲರ್ಟ್ ಘೋಷಿಸಲಾಗಿದೆ.

Related posts