ಬೆಂಗಳೂರಿನಲ್ಲಿ ಕತ್ತರಿಸಿದ ಹಣ್ಣು ಮಾರಾಟಕ್ಕೆ ಅವಕಾಶ ಇಲ್ಲ

ಬೆಂಗಳೂರು; ಕೊರೋನಾ ವೈರಾಣು ಹಾವಳಿ ಹಿನ್ನೆಲೆಯಲ್ಲಿ ಕತ್ತರಿಸಿದ ಹಣ್ಣುಗಳ ಮಾರಾಟಕ್ಕೆ ಅವಕಾಶವಿಲ್ಲ. ಬೆಂಗಳೂರು ನಗರದಲ್ಲಿ ಜನರ ಆರೋಗ್ಯದ ಸುರಕ್ಷತೆ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕೃಷಿ ಸಚಿವರಾದ ಬಿ.ಸಿ.ಪಾಟೀಲ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ನಾಗರೀಕರಿಗೆ ಅಗತ್ಯವಾಗಿರುವ ಹಣ್ಣುತರಕಾರಿಗಳ ಕೊರತೆಯಾಗದಂತೆ ಕ್ರಮಕೈಗೊಳ್ಳುವ ನಿಟ್ಟಿನಲ್ಲಿ ಬಿಬಿಎಂಪಿ ಅಧಿಕಾರಿಗಳ ಜೊತೆ ಸಚಿವ ಬಿ.ಸಿ. ಪಾಟೀಲ್ ಸಭೆ ನಡೆಸಿದರು. ಜನರ ಆರೋಗ್ಯಕ್ಕಾಗಿ ಹಲವು ಪ್ರಮುಖ ಕ್ರಮಗಳನ್ನು ರೂಪಿಸಲಾಯಿತು. ಇದೆ ವೇಳೆ
ಕತ್ತರಿಸಿದ ಹಣ್ಣುಗಳ ಮಾರಾಟ ಸಂಬಂಧ ಜನರಿಂದ ಅಭಿಪ್ರಾಯ ಸಂಗ್ರಹಿಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

ಹಣ್ಣು ತರಕಾರಿಗಳ ಕೊರತೆಯಾಗದಂತೆ ನೇರ ಮಾರುಕಟ್ಟೆಗೂ ವ್ಯವಸ್ಥೆ ಕಲ್ಪಿಸಲಾಗಿದೆ.‌ ಈ ನಿಟ್ಟಿನಲ್ಲಿ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಅದ ಕಂದಾಯ ಸಚಿವ ಆರ್.ಅಶೋಕ್ ಹಾಗೂ ಬಿಬಿಎಂಪಿ‌ ಮೇಯರ್ ಜೊತೆ ಸಚಿವ ಬಿ.ಸಿ.ಪಾಟೀಲ್ ಸಭೆ ನಡೆಸಿದರು. ಹಾಪ್ಕಾಮ್ಸ್ ಮೂಲಕ ರೈತರು ಬೆಳೆದ ಹಣ್ಣುಗಳನ್ನು ಖರೀದಿಸಲು ಜಾಹೀರಾತು ಪ್ರಕಟಣೆ ನೀಡಲು ತೀರ್ಮಾನಿಸಲಾಯಿತು. ನಂದಿನಿ ಬೂತ್ ಗಳಲ್ಲೂ ಹಣ್ಣು ತರಕಾರಿ ಮಾರಾಟಕ್ಕೆ ಅವಕಾಶ ಕಲ್ಪಿಸಲು ಮತ್ತು  ಹಾಪ್‌ಕಾಮ್ಸ್ ಳೊಂದಿಗೆ ಬಿಬಿಎಂಪಿ ವಾರ್‌ರೂಂನಲ್ಲಿ ನಾಳೆ ವೀಡಿಯೊ ಸಂವಾದ ನಡೆಸಲು ತೀರ್ಮಾನಿಸಲಾಯಿತು.

Related posts